ಚಂದಗಾಲು ಬೋರಪ್ಪ (೧೯೫೪–೨೦೨೦), ನಾಡಿನ ತತ್ತ್ವಪದ ಗಾಯಕರಲ್ಲಿ ಪ್ರಮುಖರು. ತತ್ತ್ವಪದದ ಜೊತೆಜೊತೆಗೆ ಜನಪದ ಗೀತೆಗಳು, ಭಾವಗೀತೆ, ಭಕ್ತಿಗೀತೆ ಮತ್ತು ರಂಗಗೀತೆಗಳ ಹಾಡುವಿಕೆಯಲ್ಲಿ ಹೆಸರಾದವರು. ಮಂಡ್ಯ ತಾಲೂಕಿನ ಚಂದಗಾಲು ಗ್ರಾಮ ಹುಟ್ಟೂರಾದ್ದರಿಂದ ‘ಚಂದಗಾಲು ಬೋರಪ್ಪ’ ಎಂದೇ ಪರಿಚಿತರು. == ತತ್ತ್ವಪದ ಗಾಯಕರಾಗಿ == ತಮ್ಮದೇ ಒಂದು ತಂಡ ಕಟ್ಟಿ, ಊರೂರು ತಿರುಗಿ, ತತ್ತ್ವಪದಗಳನ್ನು ಜನರಿಗೆ ತಲುಪಿಸಲು ಅಹರ್ನಿಶಿ ದುಡಿದವರು ಬೋರಪ್ಪ. ಸಂತ ಶಿಶುನಾಳ ಶರೀಫ, ಗುರು ಮಹಾಂತೇಶ, ಕನಕದಾಸ ಮೊದಲಾದವರ ಹಾಡುಗಳನ್ನು ದಕ್ಷಿಣ ಕರ್ನಾಟಕದಲ್ಲಿ, ಅದರಲ್ಲೂ ಮಂಡ್ಯ, ಮೈಸೂರು ಭಾಗದಲ್ಲಿ ಜನಪ್ರಿಯವಾಗಿಸಿದವರಲ್ಲಿ ಬೋರಪ್ಪನವರು ಪ್ರಮುಖರು. ಅವರು ಕೊಟ್ಟ ವೇದಿಕೆ ಕಾರ್ಯಕ್ರಮಗಳು ಅಸಂಖ್ಯ. ಬೋರಪ್ಪನವರು ತಾವು ಕಲಿತ ತತ್ತ್ವಪದಗಳನ್ನು ಸಂರಕ್ಷಿಸುವ ಸಲುವಾಗಿ, "ಶರಣ ತತ್ತ್ವಪದ ಸಾರ" ಎಂಬ ಪುಸ್ತಕವನ್ನು ಸಂಪಾದಿಸಿ, 2012ರಲ್ಲಿ ಪ್ರಕಟಿಸಿದರು. ಅದಕ್ಕೂ ಮೊದಲು "ಅಕ್ಕ ನೋಡಕ್ಕ" ಮತ್ತು "ಗಂಡಗಂಜಿ ಬದುಕು ಮಾಡಮ್ಮ" ಎಂಬ ತತ್ತ್ವಪದಗಳ ಧ್ವನಿಸುರುಳಿಗಳನ್ನು ಹೊರತಂದರು. == ಪ್ರಶಸ್ತಿಗಳು == ಹಲವಾರು ಪುರಸ್ಕಾರಗಳಿಗೆ ಬೋರಪ್ಪ ಪಾತ್ರರಾಗಿದ್ದಾರೆ. ಕೆಲವು ಇಲ್ಲಿವೆ. 2015 - ಮಂಡ್ಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ 2014 - ಜಾನಪದ ಲೋಕ ಪ್ರಶಸ್ತಿ ತತ್ತ್ವಪದ ಗಾರುಡಿಗ ಬಿರುದು ಇತ್ಯಾದಿ. == ಉಲ್ಲೇಖಗಳು == == ಬಾಹ್ಯಕೊಂಡಿಗಳು ==